Monday, October 13, 2014

ಅಬಸಿ ಸಮಾಚಾರ - ೨


ಇದು ನಾ ಕಂಡ ನಮ್ಮೂರಿನ ಒಂದು ದೊಡ್ಡ ಐರನಿ -  ಮಳೆ ಮಾಪನ ವಿಧಾನ.

ನಮ್ಮೂರಿನ ಜನಕ್ಕೆ ಈ ಸಾಲುಗಳು ತೀರಾ ಸಾಮಾನ್ಯ.

'ಈ ವರ್ಷ ಸಿಕ್ಕಾಪಟ್ಟೆ ಮಳೆ, ೨ ತಿಂಗಳು ಯಾವುದೇ ಕಾರ್ ಬಂದರೂ, ಊರ್ ಬಾಗಿಲ ರಸ್ತೆಯಲ್ಲಿ ಹುಗಿದು, ಕೆಸರು ಕುಡಿದ ಮೇಲೆ ಒಳಗಡೆ ಪ್ರವೇಶ, ಗೊತ್ತ? ನೀವೇ ಲೆಕ್ಕ ಹಾಕಿ ಎಷ್ಟು ಮಳೆ ಈ ವರ್ಷ '

'ಹೋದ ವರ್ಷ ಮಳೆನೇ ಇಲ್ಲ, ನಮ್ಮೂರ ರಸ್ತೆಲಿ ಜೌಳು ಆಗಿದ್ದೇ ನೋಡಿಲ್ಲ,'

'ನಿನ್ನೆ ಸಂಜೆ ಎಂಥಾ ಮಳೆ ಅಂತೀರಿ! ೨ ಕಾಲುವೆ, ರಸ್ತೆ ಏಕ ಆಗಿ ತುಂಬಿ, ನೀರು ಚಹಾ ಥರ ಹರೀತಿತ್ತು'

ಈ ಮಳೆಗಾಲದಲ್ಲಿ ಅಬಸಿಯ ಈ ಒಂದೇ ಒಂದು ರಸ್ತೆ ಎಷ್ಟು ಹಾಳಾಗಿದೆ? ಎಷ್ಟು ಕಾರ್, ಲಾರಿಗಳು ಕೆಸರಿನಲ್ಲಿ ಹೂತು ವರಗುಟ್ಟುತ್ತ ಒದ್ದಾಡಿದವು? ಊರಿನ ಬಾಗಿಲಿನ ಮುಂದಿನ ಇಳುಕಲು ಎಷ್ಟು ತಿಂಗಳು ಕೆಸರು ತುಂಬಿ ನಿಂತಿತ್ತು? ರಸ್ತೆ ಕೆಸರಿನಲ್ಲಿ ಎಷ್ಟು ಜನ ಬಿದ್ದು ಎದ್ದರು? ಹೋದ ವರ್ಷ ಹಾಕಿದ ಮಣ್ಣು ತೊಳೆದು ಹೋಗಿ ಕಲ್ಲುಗಳೆಲ್ಲ ಮೇಲೆ ಬಂದಿವೆಯೇ ಇಲ್ಲವೇ? ಇವು ಎಲ್ಲಾ ನಮ್ಮೂರಿನ ಮಳೆಗಾಲದ ಪ್ರಮಾಣಗಳು.

ನಮ್ಮೂರಿನ ದುರಂತ ಇದು, ದುರಂತವಲ್ಲದೇ ಇನ್ನೇನು? ಮಂಗಳ ಗ್ರಹಕ್ಕೆ ಸೇತುವೆ ಕಟ್ಟಿದ ನಾವು ಕನಿಷ್ಠ ಒಂದು ೫ ವರ್ಷ ಬಾಳುವ ರಸ್ತೆ ಹಾಕಲು ಅಸಾಧ್ಯ ಅಂದರೇನರ್ಥ? ಅಥವಾ ನಾವು ೨ ಕೀ ಮೀ ಉತ್ತಮ ರಸ್ತೆ ಹೊಂದಲೂ ಅನರ್ಹರೆ?

ಈ ಸಾರಿ ಪಂಚಾಯತ್ ಡೆವಲಪ್ಮೆಂಟ್ ಆಫೀಸರ್ ಆಶ್ವಾಸನೆಯಂತೆ ಎಲ್ಲಾ ಸರಿಯಾಗಿ ನಡೆದರೆ ೫೦೦೦೦ ರೂ ಉಪಯೋಗಿಸಿ ರಸ್ತೆ ಮೋರಿಗಳನ್ನಾದರೂ  ಕಟ್ಟುತ್ತಾರೋ ನೋಡಬೇಕು. PDO ತಮ್ಮ paternal leave ಮುಗಿಸಿ ಬೇಗ ಬಂದು ಈ ಕೆಲಸ ಕೈಗೆತ್ತಿಕೊಳ್ಳುತ್ತಾರೆಂದು ಆಶಿಸೋಣ.

ಅಬಸಿಯ ರಸ್ತೆಯ ಕೊಚ್ಚೆ, ಧೂಳುಗಳ ನಡುವೆ ನೀವು ನಾಲ್ಕು ದಿನ ನಡೆದು  ಸೂಕ್ಷ್ಮವಾಗಿ ಗಮನಿಸಿದರೆ ಒಂದು ವಿಷಯ ನಿಮಗೆ ಆಶ್ಚರ್ಯಪದಿಸುತ್ತದೆ. ಅಬಸಿಯಲ್ಲಿ ಸುಮಾರು ೫೦೦ ಕ್ಕೂ ಹೆಚ್ಚು ದನಕರುಗಳಿರಬಹುದು, ನಮ್ಮ ಹಾಗೆ ಈ ದನಕರುಗಳಿಗೂ ಇರುವುದೊಂದೇ ರಸ್ತೆ, ಮತ್ತು ಇಲ್ಲಿ ಯಾವ ಹಸುಗಳಿಗೂ ಶೌಚಾಲಯದ ಪ್ರಜ್ಞೆ ಇನ್ನೂ ಇದ್ದಂತಿಲ್ಲ, ಹಾಗಾಗಿ ಬೆಳಿಗ್ಗೆ ಮೇವಿಗೆ ಹೊರಟಾಗ ಎಲ್ಲಾ ಹಸುಗಳೂ ರಸ್ತೆಯನ್ನು ಬೇಕಾಬಿಟ್ಟಿ ಉಪಯೋಗಿಸಲು ಸ್ವಲ್ಪವೂ ಹಿಂಜರಿಯುವುದಿಲ್ಲ, ಅಥವಾ ಅವುಗಳು ನಮ್ಮೂರ ರಸ್ತೆಯ ಮಟ್ಟವನ್ನು ಸರಿಯಾಗಿ ಅಳೆದು ಯೋಗ್ಯ ರೀತಿಯಲ್ಲಿ ಈ ಮೂಲಕ ಉಪಯೊಗಿಸುತ್ತಿದ್ದಿರಬಹುದು. ನೆಲಕ್ಕೆ ಬಿದ್ದ ಸೆಗಣಿ ಹಸುಗಳ ಕಾಲ್ತುಳಿತ, ಮಳೆ, ಗಾಳಿಗಳಿಂದ ಇನ್ನೂ ಹರಡಿ ಗಲೀಜು ಸುಲಭವಾಗಿ ಹರಡಬಹುದಿತ್ತು. ಆದರೆ ಆಶ್ಚರ್ಯ ಎಂದರೆ ರಸ್ತೆ ಮೇಲೆ ಒಂಚೂರೂ ಸೆಗಣಿ  ಕಾಣುವುದಿಲ್ಲ.

ಇದಕ್ಕೆ ಕಾರಣ ಬೇರೆ ಯಾರೂ ಅಲ್ಲ - ನಮ್ಮೂರಿನ ದೇವಮ್ಮ. ನಾನು ನೋಡಿದಂತೆ ಕಳೆದ ೧೦-೧೫ ವರ್ಷಗಳಿಂದ ಅವಿರತವಾಗಿ ದಿನಾ ಬೆಳಿಗ್ಗೆ ಹಸುಗಳು ಮೇವಿಗೆ ಹೊರಡುವ ವೇಳೆಯನ್ನು ಕಾದು ಬುಟ್ಟಿ ತುಂಬಾ ಸೆಗಣಿ ಹೆಕ್ಕಿ ತನ್ನ ಗೊಬ್ಬರದ  ಗುಂಡಿ ತುಂಬಿಸುತ್ತಾಳೆ. ದೇವಮ್ಮನ ಕೊಟ್ಟಿಗೆ ಗೊಬ್ಬರಕ್ಕೆ ಈ ದಿನಗಳಲ್ಲಿ ತುಂಬಾ ಬೇಡಿಕೆ, ದನ ಕರುಗಳ ಸಂಖ್ಯೆ ನಿಧಾನವಾಗಿ ಕಡಿಮೆ ಆಗುತ್ತಿರುವ ಈ ದಿನಗಳಲ್ಲಿ ಕೊಟ್ಟಿಗೆ ಗೊಬ್ಬರದ supply ಕಡಿಮೆ,  naturally ಬೇಡಿಕೆ ಜಾಸ್ತಿ.  ದೇವಮ್ಮನ business model ಸಾಲಿಡ್! ಆದರೆ ದೇವಮ್ಮ ದುಡ್ಡು ಸಂಪಾದಿಸಲು ಸೆಗಣಿ ಹೆಕ್ಕುತ್ತಾಳೆಯೆ? ಯಾರಿಗಾಗಿ ಸಂಪಾದಿಸಬೇಕು? ನಾನು ನೋಡಿದಂತೆ ದೇವಮ್ಮ ತುಂಬಾ ಮುಂಚಿನಿಂದಲೂ ಒಂಟಿ ಹೆಂಗಸು, ವಯಸ್ಸಾದರೂ ಬೇರೆ ಮನೆಗೆ ಹೋಗುವುದಿಲ್ಲ, ಸಂಬಂಧಿಕರೆಂದು ಬೇರೆ ಊರಿಗೆ ಹೋಗಿದ್ದಂತೂ ಇಲ್ಲವೇ ಇಲ್ಲ. ಹಿಂದೆಲ್ಲಾ ತನ್ನ ಬೊಂಬಾಯಿಗೆ ಫೇಮಸ್, ಇತ್ತೀಚೆಗೆ ಕೂಗಾಡಿದ್ದನ್ನು ಕೇಳಿಲ್ಲ, ಯಾರ ಮೇಲೆ ಕಿರುಚಾಡಿಯಾಳು? ಅಥವಾ ಜಗಳ ಕಾಯುವ ಮನಸ್ಸಿದ್ದರೂ ವಯಸ್ಸು ಶಕ್ತಿಯನ್ನು ಕೊಡುತ್ತಿಲ್ಲವೇನೋ? ಅದೇನೇ ಇದ್ದರೂ ಸೆಗಣಿ ಹೆಕ್ಕುವುದರಲ್ಲಿ ಎದೆಗುಂದಿಲ್ಲ,
ನಮ್ಮೂರನ್ನು ಸ್ವಚ್ಛವಾಗಿಡಬೇಕೆಂಬ ಪ್ರೇರಣೆ ಇರಬಹುದೆ?  ನಮ್ಮವರಲ್ಲಿ ಹಲವರಿಗೆ ಸೆಗಣಿಯೇ sacred ಆಗಿರುವಾಗ ಸೆಗಣಿ ಮುಕ್ತ ರಸ್ತೆ ಎಂಬ ಕಲ್ಪನೆಯನ್ನು ದೇವಮ್ಮ ಮಾಡಿರಲಾರಳು.

ಒಮ್ಮೆ ಕೊಟ್ಟಿಗೆಗೆ ಹೋಗಿ ಬಂದರೆ ೨ ಸಾರಿ ಕೈ ಕಾಲು ತೊಳೆಯುವ ನಾನು, ಸೆಗಣಿ ಆರಿಸುವವರಿಗೆ ಅದ್ಯಾವ ಪ್ರೇರಣೆ ಎಂದು ಆಶ್ಚರ್ಯ ಪಡುತ್ತಿದ್ದೆ. ದೇವಮ್ಮಗೆ 'ಸ್ವಚ್ಚ ಭಾರತ' project ಖಂಡಿತ ತಲುಪಿರಲಾರದು. ಸ್ವಚ್ಚ ಭಾರತ ಹಾಗಿರಲಿ ಅವಳಿಗೆ ಭಾರತದ ಕಲ್ಪನೆ ಇದೆಯೇ? ನಮ್ಮೂರನ್ನು ಸ್ವಚ್ಚವಾಗಿಡಬೇಕೆಂಬ ಆಶಯ ಕೂಡ ಇಲ್ಲವೇನೋ. ಆದರೆ ಕ್ಯಾಮೆರಾ ಎದುರಿಗೆ ಗಾಂಧಿ ಹೆಸರಲ್ಲಿ ಪೊರಕೆ ಹಿಡಿಯುವ celebrityಗಳು ಕಳೆದ ೧೦-೧೫ ವರ್ಷಗಳಿಂದಲೂ ಅವಿರತವಾಗಿ ಒಂದು ದಿನವೂ ತಪ್ಪದೆ ದುಡಿದ ದೇವಮ್ಮನೆದುರು ಕ್ಷುಲ್ಲಕ ಅಲ್ಲವೆ? ಯಾವುದೋ ಹೊಸ project ಗೆ ambassador ಎಂದುಕೊಳ್ಳುತ್ತ 'ದೇಶ ಪ್ರೇಮ'ದಿಂದ ಬೀಗುವವರಿಗಿಂತ ದೇಶ, ಕಾಲಗಳ ಪರಿವೆ ಇಲ್ಲದೆಯೇ ಅದಾವ ಶೂನ್ಯದಿಂದ ಪಡೆದ ಪ್ರೇರಣೆಯ ಫಲವೇ ಅಮೂಲ್ಯ ಅಲ್ಲವೇ?

ಈ ಹೊತ್ತು ದೇವಮ್ಮಗೆ thanks ಹೇಳಬೇಕು ಅನಿಸಿದರೆ ಅಬಸಿಯ ತನಕ ಬರುವ ಅವಶ್ಯಕತೆ ಇಲ್ಲ, ಅಲ್ಲೇ ನಿಮ್ಮ ಆಸು ಪಾಸು ಕಣ್ತೆರೆದು ನೋಡಿ. 

Sunday, August 31, 2014

ಅಬಸಿ ಸಮಾಚಾರ


ಅಬಸಿಯಲ್ಲಿ ಈ ವರ್ಷ ಎಲ್ಲಿ ನೋಡಿದರೂ ಬಿದಿರು ಅಕ್ಕಿ ಸಂಬ್ರಮ. Feb ವರೆಗೂ ತಿಳಿ ಹಳದಿ ಹೂವಿನಿಂದ ಕಂಗೊಳಿಸುತ್ತಿದ್ದ ಬಿದಿರು ಮಟ್ಟಿಗಳು ಈಗ ಎಲ್ಲ ಸತ್ತು ನಿಂತಿವೆ. ಇನ್ನೂ ಉಳಿದ ಕೆಲವು ಮುಂದಿನ ವರ್ಷ ಹೂ ಬಿಟ್ಟು ನೆಲ ಕಚ್ಚ್ಚುತ್ತವೆ. 

ಬಿದಿರು ಹೂ ಬಿಟ್ಟರೆ ಕ್ಷಾಮ ಅಂತ ಹೇಳ್ತಾರೆ - ಈ ಮಾತು ವೈಜ್ಞಾನಿಕವಾಗಿರಲಾರದೇನೋ!  ಆದರೆ ಸತ್ತು ನಿಂತ ೫೦ ಅಡಿ ಎತ್ತರದ ಈ ಲಕ್ಷಾಂತರ ಬಿದಿರು ಮಟ್ಟಿಗಳು ಬೇಸಿಗೆ ಕಾಡಿನ ಬೆಂಕಿಗೆ ಹೇಳಿ ಮಾಡಿಸಿದ ಕ್ಯಾಟಲಿಸ್ಟ್.  ಒಣಗಿ ನಿಂತ ಬಿದಿರು ಸುಲಭವಾಗಿ ಸುದುವುದಷ್ಟೇ ಅಲ್ಲದೆ ಅಷ್ಟೆತ್ತರದ ಜ್ವಾಲೆಗಳ ಕಿಡಿಗಳು ಗಾಳಿಯಲ್ಲಿ ಬಹು ಬೇಗ ಹರಡಲು ಸಹಾಯ ಮಾಡುತ್ತವೆ. ಆಧುನಿಕ ಕಾಲದ ಅಬಸಿ ಇಂದೂ ಬಿದಿರಿನ ಮೇಲೆ ಹೇರಳವಾಗಿ ಅವಲಂಬಿತವಾಗಿರುವುದು ಆಶ್ಚರ್ಯ ಆದರೂ ನಿಜ. ಗಳಗಳು ಮತ್ತು ಬೇಲಿ ಬಹು ಮುಖ್ಯ ಉಪಯೋಗ. ನಮ್ಮೂರಿನ ಛಿದ್ರ ಛಿದ್ರಗೊಂಡ ಗದ್ದೆ, ತೋಟ, ಬ್ಯಾಣಗಳು ಪ್ರತೀ ವರ್ಷ ಬೇಲಿಯಿಂದ ಒಳಗೊಳ್ಳಲೇಬೇಕು. ಎಕರೆಗೆ ಕಡಿಮೆ ಎಂದರೂ ೨೫೦ ಮೀ ಬೇಲಿ.  ಗದ್ದೆ ಬೇಲಿ, ಹೊಮ್ಮಂಡದ ಬೇಲಿ, ಗದ್ದೆ ಬೇಲಿ, ಅಡಿಕೆ ತೋಟದ ಬೇಲಿ, ಮನೆ ಸುತ್ತ ಬೇಲಿ, ಹೂವಿನ ಗಿಡಗಳ ಸುತ್ತ, ಬ್ಯಾಣದ ಬೇಲಿ, ಅನಾನಸ್ ಬ್ಯಾಣದ ಕರೆಂಟ್ ಬೇಲಿ, ಅರಿಶಿನ, ಶುಂಠಿ ಬೇಲಿ, ಕಾಲ್ದಾರಿಗೆ ಬೇಲಿ, ಒಂದೇ ಎರಡೇ .. .     ಬಿದಿರಿನ ಗೂಟ, ಮುಳ್ಳು ಹ್ಯಾಡಗಳು ಎಷ್ಟು ಬೇಕಾಗುತ್ತವೋ ಯಾರು ಲೆಕ್ಕ ಮಾಡಿದವರು! ಬಿದಿರು ಅಕ್ಕಿಯಿಂದ ಮತ್ತೆ ಬಿದಿರು ಬೆಳೆದು ನಿಲ್ಲಲು ಕಡಿಮೆ ಎಂದರೂ ಇನ್ನು ೮ ವರ್ಷ ಬೇಕು. ಅಲ್ಲಿಯವರೆಗೆ ಬಿದಿರು ಅಲಭ್ಯ, ಶೂನ್ಯ. ಕಾಡಿನ ಬೇರೆ ಗಿಡ ಮರ ಮುಳ್ಳು ಗಿಡಗಳ ಮೇಲೇ  ಅವಲಂಬಿತವಾಗಬೇಕು, ಅವು ಬೆಂಕಿಗೆ ಸಿಗದೇ ಉಳಿದಿದ್ದರೆ! 

ಇನ್ನು ಈ ಬಿದಿರು ಅಕ್ಕಿ ತಿಂದು ಇಲಿ ಸಂತತಿ ಜಾಸ್ತಿ ಆಗುತ್ತಂತೆ, ನಿಜವೇ ಆದರೆ - ಬೆಳೆದ ಬತ್ತ ಎಷ್ಟು ಉಳಿಯುತ್ತದೋ ಕಾದು ನೋಡಬೇಕು.  

ಇದೆಲ್ಲಾ ಕಥೆ ಅಬಸಿಯಂತಹ ಚಿಕ್ಕ ಗ್ರಾಮದ್ದು. ಊಹೆಗೂ ನಿಲುಕದಷ್ಟು ಹಳ್ಳಿಗಳ ಅವುಗಳದೇ ಆದ ಸಂಕೀರ್ಣ ಜಗತ್ತಿನ ಏನಲ್ಲಾ ಕಥೆಗಳನ್ನು ಯಾರು ಹೇಳುವವರು? 

ಕಾಡಿನ ಮೇಲೆ ಅವಲಂಬಿತವಾಗದೇ, ಕಬ್ಬಿಣದ ಗಳಗಳು, ತಂತಿ ಬೇಲಿ ಪರಿಹಾರ ಖಂಡಿತ ಸಾಧ್ಯ.  ಆದರೆ ಬಂಡವಾಳ? "ಬೇಲಿ ಸಾಲ" ಅಂತ ಏನಾದರೂ ನಿಮ್ಮ ತಲೆಯಲ್ಲಿ ಪರಿಹಾರ ಬಂದರೆ ಖಂಡಿತ ಮರೆತುಬಿಡಿ. ನಮ್ಮ ಸರ್ಕಾರಗಳು ಇಕಾಲಜಿ ಅಂತಹ ಸೂಕ್ಷ್ಮ ವಿಷಯಗಳಿಗೆ ಸ್ಪಂದಿಸಲು ಕಲ್ಪನೆಯಲ್ಲೂ ಸಾಧ್ಯವಿಲ್ಲ. ಬಿದಿರು ಹೂ ಆಗುವಂತಹ ವಿದ್ಯಮಾನ ಸರ್ಕಾರಗಳ grand scheme of  things ಹೇಗೆ ಒಳಗೊಳ್ಳುತ್ತದೆ?  

*******************************************************************************
ಈಗೆಲ್ಲಾ  ಇದು ಸಾಮಾನ್ಯ, ಈ ಥರದ ಸುದ್ದಿಗಳು ವಾರಕ್ಕೆರಡು ಬರುತ್ತಲೇ ಇರುತ್ತವೆ. ಒಂದು ಕಡೆ ಗಾಡ್ಗೀಳ್ vs ಕಸ್ತುರಿರಂಗನ್, ಇನ್ನೊಂದು ಕಡೆ ಮಾಳಿನ್  landslide, US ನಲ್ಲಿ ಬಾಡಿಗೆ ಜೇನು ನೊಣಗಳು..  ಹೀಗೆ ಹಲವಾರು. ನಮ್ಮ ಹಸಿವು ಹೆಚ್ಚ್ಚಾದಂತೆ ಪ್ರಕೃತಿ ವಿಕೋಪ, ಸೊಜಿಗಗಳು ಹೆಚ್ಚುತ್ತಿವೆ, ಈ ಥರದ ನ್ಯೂಸ್ ಓದಲು ನಾವು ತಯಾರಿರಬೇಕು ಅಷ್ಟೇ. ಆದರೆ ಕಳೆದ ಸೋಮವಾರದ ಪ್ರಜಾವಾಣಿ ಲೇಖನ ಅಳಿವಿನ ಅಂಚಿನಲ್ಲಿ ಅಶೋಕ ವೃಕ್ಷ ನನಗೆ ಬರೀ ಮಗದೊಂದು 'ಇಕಾಳಜಿ' ಲೇಖನ ಆಗಿರಲಿಲ್ಲ, 

ಏಕೆಂದರೆ ಇದು ಅಬಸಿ ಕನೆಕ್ಷನ್, ನಮ್ಮೂರಿನ ಬಹುಷಃ ಎಲ್ಲರಿಗೂ ರಾಮೇಶ್ವರ ಕಾನಿನ ಅಶೋಕ ಮರಗಳ ಬಗ್ಗೆ ಗೊತ್ತಿರುತ್ತದೆ.  ಕೆಲವರು ನೋಡಿರಲೂಬಹುದು. ನಮ್ಮೂರಿನ ಕಾಡೆನೋ ಒಳ ಹೋಗಲಾರದ ಅಭೇದ್ಯ ಕಾಡೆನೋ ಅಲ್ಲ, ತರಚು ಗಾಯಗಳಿಗೆ ಹೆದರಿ ಅಥವಾ ದಾರಿ ಗೊತ್ತಿಲ್ಲದೇ ಹಲವರು ಈ ಅಶೋಕ ಮರಗಳನ್ನು ನೋಡಿರುವುದಿಲ್ಲ. ಕಾಡಿನ ಮಧ್ಯ ಭಾಗದಲ್ಲಿರುವ ಈ ವೃಕ್ಷಗಳನ್ನು ನೋಡಿದರೆ ಆಶ್ಚರ್ಯ ಸಹಜ, ಬೇರೆ ಎಲ್ಲೂ ಕಾಣದ ಈ 'ಶೋ' ಮರಗಳು ಇಲ್ಲಿ ಮಾತ್ರ ಯಾಕೆ ಇವೆ? ಇವು ಇರುವ ಲ್ಯಾಂಡ್ಸ್ಕೇಪ್ ಕೂಡ ತಗ್ಗು ಉಬ್ಬುಗಳಿಂದ ಕೂಡಿದ ಪ್ರದೇಶ - ಬಹುಷಃ ಈ ಕೆಲವು ಕಾರಣಗಳು ಅಶೋಕ ಮರಗಳಿಗೆ myth touch ಕೊಟ್ಟಿವೆ ಕೂಡ. ರಾಮ, ಈಶ್ವರ, ಅಶೋಕ ಮರಗಳು ಎಂದು ಕನೆಕ್ಷನ್ ತಂದಿಟ್ಟರೆ ಒಂದು ರೀತಿಯಲ್ಲಿ ಒಳ್ಳೆಯದೇ, ಕಾಲ್ಪನಿಕವೋ, ನಿಜವೋ! ಅಂತೂ ರಾಮ, ಈಶ್ವರನ ಪೂಜೆಗಾಗಿ ನೆಟ್ಟ ಗಿಡಗಳು ಎಂದು ಹೇಳಿದರೆ ಅದೂ ಒಂದು ಮಟ್ಟಿನಲ್ಲಿ conservation! ಅಲ್ಲವೇ. ಯಾರಿಗೆ ರಾಮ, ಈಶ್ವರರ ಮೇಲೆ ನಿಯತ್ತು? ಅನ್ನೋ ಪ್ರಶ್ನೆ ಬೇರೆಯೇ ಬಿಡಿ. 

ನಿಶ್ನೆ(ದಾಲ್ಚಿನ್ನಿ) ಗೆ ಸಿಕ್ಕಾಪಟ್ಟೆ ರೇಟ್ ಬಂದಾಗ ಮರಗಳನ್ನು ಸ್ವಾಹ ಮಾಡಿಲ್ಲವೇ? ಕಾಡು ನೆಲ್ಲೀ ಮರಗಳು ಎಷ್ಟೋ ನಾಪತ್ತೆ ಆಗಿಲ್ಲವೇ? ಇನ್ನು ಮುಂದೆ ಅಶೋಕ ಮರಗಳ ಸರದಿಯೇ?

E-TV ಯ ನಮಸ್ಕಾರದಲ್ಲಿ ತೇಜಸ್ವಿ ಹೇಳಿದ್ದು ಎಷ್ಟು ನಿಜ - "once we start interpreting forests in terms of money..... ", ಅಶೋಕ ಮರಗಳನ್ನು ಔಷಧೀಯ ಸಸ್ಯ, ಬೆಲೆ ಬಾಳುವ ಅಂತ ವಿಂಗಡಿಸಿದ ಕೂಡಲೇ ಅದರ ವಿನಾಶ ಎಂದರ್ಥ. 

ಬಿದಿರು ಹೂ ಬಿಡುವುದು ಸಹಜ;  ಪ್ರಕೃತಿಯ ಮೇಲೆ ಮಾನವನ ಒತ್ತಡ ಕೂಡ ಹೊಸದಲ್ಲ, ಇದಕ್ಕೆಲ್ಲ ಪ್ರಕೃತಿ ತನ್ನಷ್ಟಕ್ಕೆ ಉತ್ತರ ಕಂಡುಕೊಳ್ಳುತ್ತದೆ ಎನ್ನುವುದೊಂದು  ವಾದ, ಕಾಡು ನಾಶವಾದ ಜಾಗದಲ್ಲಿ ಲಂಟಾನ, ಚದುರಂಗ ಬೆಳೆದು green cover ಸಮತೋಲನವನ್ನು ಪ್ರಕೃತಿ ತನ್ನಷ್ಟಕ್ಕೇ ಸಾಧಿಸಿಲ್ಲವೇ ಹಾಗೆ. ಕಾದು ನೋಡಬೇಕಷ್ಟೇ! 

ಸರಾಸರಿ ೬೦ ವರ್ಷಕ್ಕೊಮ್ಮೆ ನಡೆಯುವ ಈ ವಿದ್ಯಮಾನವನ್ನು ಇನ್ನೊಮ್ಮೆ ನೋಡಲು ನಾನಂತೂ ಇರುವುದಿಲ್ಲ. ಮುಂದಿನ ಬಿದಿರು ಯುಗದ ಅಂತಿಮ ದಿನಗಳನ್ನು ನೀವು ನೋಡಿದ್ದೇ ಆದರೆ ಸಮಾಚಾರಗಳನ್ನು ನನಗೂ ಹೇಳಿ! 

********************************************************************************

ಅಬಸಿಗೆ ಅಬಸಿ ಅಂತ ಯಾಕೆ ಹೆಸರು ಬಂತು? ನನ್ನ ದೋಸ್ತ್ ಶಶಿಯ explanation ಕೆಳಲೇಬೇಕು. 

೧೮೧೦ರ ಸುಮಾರು, ಗ್ರೇಟ್ ಟ್ರಿಗೊನೊಮೆತ್ರಿಕ್ ಸರ್ವೇಯಲ್ಲಿ ಈ ಪುಟ್ಟ ಹಳ್ಳಿ ಎದುರಾಯ್ತು. ಹೆಸರು ಗೊತ್ತಿಲ್ಲದೇ ಇರುವ ಹಳ್ಳಿಗೆ ಸದ್ಯಕ್ಕೆ ಇರಲಿ ಅಂತ ABC ಅಂತ ಮಾರ್ಕ್ ಮಾಡಿದರು, ಆಲ್ಜೀಬ್ರಾದಲ್ಲಿ x,y,z ಗಳನ್ನು ಬಳಸುತ್ತೆವಲ್ಲವೕ ಹಾಗೆ. ಇದೇ ಕಾಲಾನಂತರ ಅಬಸಿ. 
ಶಶಿಯ ಈ sensational discovery ನಿಮಗೆ ಇಷ್ಟವಾದರೆ ಮರೆಯದೆ ತಿಳಿಸಿ. 


Wednesday, June 30, 2010

ಮರಳ್ಗಳ್ಳರು

ಮಲೆಘಟ್ಟ ಸೋಪಾನ ಕೆಳಪಟ್ಟಿಯಲಿ....
ಕಲೀಲ ತಾನೇ ಗುಡ್ಡೆ ಹಾಕಿದ ಮರಳ ದಿಣ್ಣೆ ಮೇಲೆ ಬೀಡಿ ಎಳೀತಾ ಎಳೀತಾ, ರೌದ್ರವಾಗಿ ಬಂದು ಪ್ರಶಾಂತವಾಗಿ ತನ್ನೆದುರಿಗೆ ಬಂದು ನಿಂತ ಬೆಣ್ಣೆ ಹೊಳೆಯನ್ನು ನೋಡುತ್ತಾ .... ಪಟೇಲರು ಹೇಳಿದ ಹೊಸ ನೌಕರಿ ಬಗ್ಗೆ ಯೋಚನೆ ಮಾಡ್ತಾ ಇದ್ದ.

ಬೆಣ್ಣೆ ಹೊಳೆಗೆ ಹೆಸರು ಬಂದದ್ದೆ ಕಲೀಲನ ಜೀವನಾಡಿಯಾದ ಈ ಬೆಳ್ಳಗಿನ ಮರಳಿನಿಂದ. ಬೆಣ್ಣೆ ಹೊಳೆ ವಜ್ರಗಿರಿಯ ಒಡಲಾಳದಿಂದ ಹುಟ್ಟಿ ಶಿಖರದ ತುದಿಯಿಂದ ಹರಿದು ತನ್ನ ದಾರಿಯುದ್ದಕ್ಕೂ ಕಲ್ಲುಗಳ ಮೇಲೆ ಧುಮ್ಮಿಕ್ಕುತ್ತಾ ನೂರಾರು ಜಲಪಾತಗಳನ್ನು ನಿರ್ಮಿಸಿ ನಂತರ ವಿಶ್ರಾಂತಿಗೇನೋ ಎಂಬಂತೆ ನೆಲ್ಲೂರಿನ ಈ ಮಡುವಿನಲ್ಲಿ ದೊಡ್ಡ ಸರೋವರವನ್ನೇ ನಿರ್ಮಿಸಿತ್ತು. ತನ್ನ ದಾರಿಯಲ್ಲಿ ಸಿಕ್ಕ ಬೆನಚುಗಲ್ಲುಗಳನ್ನು ಈಗ್ಗೆ ಮಿಲಿಯಾಂತರ ವರ್ಷಗಳಿಂದ ಕೊರೆಯುತ್ತಾ, ತೀಡುತ್ತಾ ಉಂಟಾದ ಹೊಳೆಯುವ ಮರಳಿನ ಸಣ್ಣ ಸಣ್ಣ ಸ್ಫಟಿಕಗಳನ್ನು ವಿಶಾಲವಾಗಿ ಹರಡಿ ಈ ಮಡುವನ್ನು ಸಾಗರದ ತೀರದಂತೆ ಮಾಡಿತ್ತು. ಹೊಳೆಯುವ ಮರಳಿನ ಈ ಕೊಳವನ್ನು ಜನ ಬಿಳೀಮಡುವು ಎಂದೇ ಕರೆಯಿತ್ತಿದ್ದರು.

ಬಿಳೀ ಮಡುವಿನ ದಂಡೆಯ ಮೇಲೆ ನೇರಳೆ ಮರದ ಹಿಂದಿನ ದಾರಿಯೇ ಕಲೀಲನ ಮನೆಗೆ ಹೋಗುವ ದಾರಿ. ಸುಮಾರು ಒಂದು ಕೂಗಳತೆಯ ದಾರಿ. ಕಲೀಲ ತನಗೆ ಬುದ್ಧಿ ತಿಳಿದಾಗಿಂದಲೂ ಮರಳು ತೋಡುವುದನ್ನೇ ಕಸುಬು ಮಾಡಿಕೊಂಡಿದ್ದ. ಚಿಕ್ಕ ದೋಣಿಯನ್ನು ಉದ್ದ ಗೂಟದ ಸಹಾಯದಿಂದ ಮಡುವಿನ ಮಧ್ಯ ಕಟ್ಟುತ್ತಿದ್ದ. ನಂತರ ಬೆತ್ತದ ಬುಟ್ಟಿಯ ಜೊತೆ ಆಳಕ್ಕೆ ಧುಮುಕಿ, ಬುಟ್ಟಿ ತುಂಬಾ ಮರಳನ್ನು ಬಾಚಿ ಮೇಲಕ್ಕೆ ಈಜಿ ಬಂದು ದೋಣಿಯ ಒಳಗೆ ಸೇರಿಸುತ್ತಿದ್ದ. ಹೀಗೆ ಪ್ರತಿ ಸರಿಯೂ ನೀರೊಳಗೆ ಧುಮುಕಿ ಮರಳನ್ನು ತರುವುದು ಕಷ್ಟದ ಬದುಕಾಗಿತ್ತು. ಪ್ರತೀ ಸರಿಯೂ ೪-೫ ನಿಮಿಷ ನೀರೊಳಗೆ ಉಸಿರು ಬಿಗಿ ಹಿಡಿದು ಕೆಲಸ ಮಾಡಬೇಕಿತ್ತು. ನೀರು ಮಿಶ್ರಿತ ಮರಳು ತುಂಬಾ ಭಾರ, ಅದನ್ನು ಎತ್ತಿ ದೋಣಿಯೊಳಗೆ ಸೇರಿಸಿದುವುದೆಂದರೆ ಪಾಪ ಕಲೀಲನಿಗೆ ನೀರಿನ ಒಳಗೂ ಮೈ ಬೆವರುತ್ತಿತ್ತು. ಆದರೆ ಕಲೀಲ ಕೆಲಸಕ್ಕೆ ಹೆದರಿದವನಲ್ಲ, ಪ್ರತೀ ವರ್ಷದಂತೆ ಬುಟ್ಟಿ ತುಂಬಾ ಮರಳು ದೋಣಿ ಸೇರುತ್ತಿತ್ತು, ಮರಳು ತುಂಬಿದ ದೋಣಿಗಳು ದಂಡೆ ಸೇರುತ್ತಿದ್ದವು. ಮಳೆಗಾಲದಲ್ಲಿ ಮರಳೆಲ್ಲ ಕೊಚ್ಚಿ ಹೋಗುತ್ತಿದ್ದರಿಂದ ಆಗ ಮರಳು ಸಿಗುತ್ತಿರಲಿಲ್ಲ ಮತ್ತು ಆ ಕಾಲ ಅಪಾಯಕರವೂ ಆಗಿತ್ತು. ಮಳೆಗಾಲದಲ್ಲಿ ಕಲೀಲ ಮಡುವನ್ನು ಬಿಟ್ಟು ಊರೂರು ತಿರುಗುತ್ತಾ ಕೊಡೆ ರಿಪೇರಿ, ಹಳೆ ಬಾಟಲಿ, ಪೇಪರ್ ಖರೀದಿಸಲು ಹೋಗುತ್ತಿದ್ದ. ಒಮ್ಮೊಮ್ಮೆ ಕಲಾಯಿ ಹಾಕುವುದು ಇತ್ಯಾದಿ ಮಾಡಿದ್ದೂ ಇದೆ. ಆದರೆ ಇವೆಲ್ಲಾ ಜಾಸ್ತಿ ಆದಾಯವನ್ನೇನೂ ಕೊಡುತ್ತಿರಲಿಲ್ಲ. ಪೇಟೆಗೆ ಹೋದಾಗ ಸುಣ್ಣ-ತಂಬಾಕು ಖರ್ಚಿಗೆ, ಮಕ್ಕಳಿಗೆ ಬೆಂಡು ಬತ್ತಾಸು ಈ ರೀತಿ ಪುಡಿಗಾಸಿಗೆ ಉಪಯೋಗವಾಗುತ್ತಿತ್ತು. ಜನಗಳ ಜೊತೆ ಬೆರೆಯುವುದು, ಸಿಕ್ಕಾಪಟ್ಟೆ ಹರಟೆ ಹೊಡೆಯುವುದು ಕಲೀಲನ ಖಯಾಲಿಯಾಗಿತ್ತು. ಸದಾ ಹೆಂಡತಿ, ಇಬ್ಬರು ಮಕ್ಕಳು, ಮರಳು, ಬೆಣ್ಣೆ ಹೊಳೆ, ದೋಣಿಗಳ ಜೊತೆ ಕಾಲ ಹಾಕುತ್ತಿದ್ದ ಕಲೀಲನಿಗೆ ಮಳೆಗಾಲ ಜನರೊಂದಿಗೆ ಹರಟೆ ಕೊಚ್ಚಲು ಅವಕಾಶ ಮಾಡಿ ಕೊಡುತ್ತಿತ್ತು. ಒಮ್ಮೆ ಚಿಕ್ಕೆರೂರಿನ ಗೌಡ್ರ ಮನೆಯಲ್ಲಿ ಬ್ಯಾಟರಿ ರಿಪೇರಿ ಮಾಡಿದ್ದು ಕಂಡು ಗೌಡರು ಅವನಿಗೆ ಇನಾಮು ಎಂದು ಕಾಫಿ ಮಾಡಿಸಿ ಕೊಟ್ಟಿದ್ದರು. ಮೊದಲ ಗುಟುಕಿನಿಂದಲೇ ಅತೀ ಪ್ರಿಯವಾಯಿತು, ಕಾಫಿ ರುಚಿ ಕಲೀಲನ ಎಲ್ಲ ಇಂದ್ರಿಯಗಳಿಗೂ ನಾಟಿತ್ತು. ಸಮಯ ಸಿಕ್ಕಾಗಲೆಲ್ಲ ಕಲೀಲ ಊರೂರು ಅಲೆಯತೊಡಗಿದ, ಯಾರಯಾರದೋ ಮನೆಯಲ್ಲಿ ಚಿಲ್ಲರೆ ಕೆಲಸ ಮಾಡಿ ಕಾಫಿ ಕುಡಿಯತೊಡಗಿದ. ಗೌಡರು, ಪಟೇಲರ ಮನೆಯಲ್ಲಿ ಕಲೀಲನ ಒಳ್ಳೆಯ ಬುದ್ಧಿ, ಸಹಾಯ ಮಾಡುವ ಬುದ್ಧಿ ಎಲ್ಲಾ ನೋಡಿ ಅತಿಥಿಯ ಕಾಫಿ ಸತ್ಕಾರ ಚೆನ್ನಾಗೆ ನಡೆಸಿದರು. ಆಮೇಲೆ ಕಲೀಲನ ಹೆಸರು ಕಾಫಿ ಸಾಬ ಎಂದೇ ಬಿತ್ತು. ಕಲೀಲ ತನ್ನ ನಿಜವಾದ ಹೆಸರು ಏನು ಎಂಬುದನ್ನೇ ಮರೆತಿದ್ದ. ಖಲೀಲ್ ಸಾಬ್ ಎಂದೋ ಅಥವಾ ಖಲೀಲ್ ಮಹಮ್ಮದ್ ಅಂತ ಏನೋ ಇತ್ತು ನೆನಪಿಲ್ಲ ಅಂತ ಹಲ್ಲು ಕಿಸಿದು ತನ್ನ ಹೆಸರಿನ ಹಿಂದಿನ ಕಥೆ ಹೇಳುತ್ತಿದ್ದ.

ಈಗ್ಗೆ ಕೆಲ ವರ್ಷಗಳಿಂದ ಮರಳು ಬೇಡಿಕೆ ಜಾಸ್ತಿ ಆಗಿದೆ, ಕಲೀಲ ತಿಂಗಳು ಬೆಳಕಿನಲ್ಲೂ ಕೆಲಸ ಮಾಡತೊಡಗಿದ. ಸಮುದ್ರ ತೀರದ ಅಬಿಗೂರಿನಿಂದ ಹಿಡಿದು ಘಟ್ಟದ ಬುಡದ ಮೇರೂರಿನವರೆಗೂ ಗಿರಾಕಿಗಳು ಮರಳು ಒಯ್ಯುತ್ತಿದ್ದರು. ಮಗ ಸಮೀರ, ದೋಣಿಯ ಮೇಲೆನಿತ್ತು ಮರಳು ಬುಟ್ಟಿ ಎತ್ತಲು ಸಹಾಯ ಮಾಡಿದರೆ, ಮಗಳು ಫಾತಿಮಾ ದೋಣಿಗೆ ಹುಟ್ಟು ಹಾಕುತ್ತಿದ್ದಳು. ಫಾತಿಮಾಳಿಗೆ ಇಷ್ಟವಾದ ಕೆಲಸ ಅಂದರೆ ಗಾಣ ಹಾಕಿ ಮೀನು ಹಿಡಿಯುವುದು. ಅಣ್ಣ, ಅಪ್ಪ ಕೆಲಸ ಮಾಡುತ್ತಾ ಇದ್ದಾಗ , ಫಾತಿಮಾ ತದೇಕಚಿತ್ತದಿಂದ ಗಾಣ ನೋಡುತ್ತಾ ಕೂತಿರುತ್ತಿದ್ದಳು.

ಉತ್ತಿದರು ಆಟಂಬಾಂಬಿನ ಬೀಜಗಳನ್ನು...
ಹೀಗೆ ಒಂದು ದಿನ, ಚೌರದ ಭೈರ ಮಡುವಿನ ಹತ್ತಿರ ಬಂದು ಪಟೇಲರು ಬರ ಹೇಳಿದ್ದರೆಂದೂ ತುಂಬಾ ಅರ್ಜಂಟ್ ಎಂದೂ ಹೇಳಿ ಹೋದ. ಕಲೀಲ ಒಂದು ಕಾಫಿ ಗಿಟ್ಟಿಸಬುದೆಂದು ಯೋಚಿಸುತ್ತಾ ಪಟೇಲರ ಮನೆ ಸೇರಿದ. ಆದರೆ ಅವನಿಗೆ ಅಲ್ಲಿ ಬೇರೆ ಏನೋ ಒಂದು ಕಾದಿತ್ತು.

ಆಗ ತಾನೇ ನೆಲ್ಲೂರಿಗೆ ಬಂದ ರೇಡಿಯೋ ಯಾವುದೋ ಒಂದು ಕರಾಳ ಸುದ್ದಿಯನ್ನು ಹೇಳುತ್ತಿತ್ತು. ದೇಶದ ಪ್ರಮುಖ ಮುಖಂಡರೆಲ್ಲರೂ ಜೈಲು ಸೇರಿದ್ದಾರೆಂದೂ, ಪರಿಸ್ಥಿತಿ ಗಂಭೀರ ಎಂದು ಅರ್ಥ ಮಾಡಿಕೊಂಡ ಕಲೀಲ. ಅಬ್ಬ! ಎಂಥ ಘಾಟಿ ಹೆಂಗಸಪ್ಪ! ಅಂತ ಮನಸಲ್ಲೇ ಅಂದುಕೊಂಡ. ಪೇಟೆಗೆ ಹೋಗಬೇಡ, ಪೊಲೀಸರು ಹಿಡಿದು ಜೈಲಿಗೆ ಹಾಕಿದರೆ ಕೇಳುವರಿಲ್ಲ! ಎಂದು ಪಟೇಲರು ಎಚ್ಚರಿಸಿದರು.

ಪಟೇಲರಿಗೆ ಮೇಲಿಂದ ಆರ್ಡರ್ ಬಂದಿತ್ತು, ತೀರ್ಥಹಳ್ಳಿ ಶ್ಯಾಮರಾಯರು ಬಿಳೀ ಮಡುವನ್ನು ಹರಾಜಿಗೆ ಹಿಡಿದಿದ್ದರು, ಇನ್ನು ಮೇಲೆ ರಾಯರು ತಮ್ಮ ಕೆಲಸದವರಿಂದ ಮರಳು ತೆಗೆಸಿ ಬಿಸಿನೆಸ್ಸ್ ಶುರು ಮಾಡಲು ಪರವಾನಗಿ ಪಡೆದಿದ್ದರು. ತುಂಬಾ ವರ್ಷದಿಂದ ಕಲೀಲ ಅಲ್ಲಿ ಕೆಲಸ ಮಾಡಿದ್ದರಿಂದ ರಾಯರು ಕಲೀಲನನ್ನು ಕೆಲಸಕ್ಕೆ ಇಟ್ಟುಕೊಳ್ಳಲು ಒಪ್ಪಿದ್ದರು.

ಈ ವಿಷಯವನ್ನು ತಿಳಿದ ಕಲೀಲ ನಾಳೆ ಏನಾಗಬಹುದೆಂಬ ಅನುಮಾನವಿಲ್ಲದೆ .. ಮರಳ ದಿಣ್ಣೆಯ ಮೇಲೆ ಕುಳಿತು ,ತಾನು ಎಷ್ಟು ಮರಳು ಹೊರತೆಗೆದರೂ ಮತ್ತೆ ಉದ್ಭವವಾಗುವ ಮರಳಿನ ಅನಂತತೆಯ ಬಗ್ಗೆ ಯೋಚಿಸುತ್ತಾ, ಮರಳನ್ನು ತಂದು ಹಾಕಿದಬೆಣ್ಣೆ ಹೊಳೆ ಮತ್ತು ಮರಳನ್ನೊದಗಿಸಿದ ವಜ್ರಗಿರಿಯನ್ನು ಧನ್ಯತಾ ಭಾವದಿನದ ನೋಡುತ್ತಾ ಕುಳಿತಿದ್ದ. "ಈವತ್ತು ಯಾಕೋ ತುಂಬಾ ಚಳಿ!" ಎಂದು ತನಗೆ ತಾನೇ ಹೇಳಿಕೊಳ್ಳುತ್ತಾ ಇನ್ನೊಂದು ಬೀಡಿ ಕೈಗೆತ್ತಿಕೊಂಡ.

ಈವತ್ತು ನೀವು ನೆಲ್ಲೂರಿಗೆ ಹೋದರೆ ಕಾಣುವುದು ಬೆಣ್ಣೆ ಹೊಳೆಯನ್ನೂ ಅಲ್ಲ, ಬಿಳೀ ಮಡುವನ್ನೂ ಅಲ್ಲ. ಬರೀ ಕೆಸರು ಗುಂಡಿ, ರಾಕ್ಷಸಾಕಾರದ ಜೆ ಸಿ ಬಿ ಗಳೂ, ಅರ್ತ್ ಮೂವರ್ ಗಳೂ, ಬೃಹದಾಕಾರದ ಲಾರಿಗಳೂ, ಗ್ರಾನೈಟ್ ಕೊಯ್ಯುವ ಯಂತ್ರಗಳೂ, ಕಲೀಲನ ಮನೆ ಇದ್ದ ಜಾಗದಲ್ಲ್ಲಿ ಈಗ ದೊಡ್ಡ ಮೈನಿಂಗ್ ಕಂಪನಿ ಆಫೀಸು. ಹೊಳೆಗೆ, ಮಡುವಿಗೆ ಹೆಸರು ಹೇಗೆ ಬಂದಿರಬಹುದೆಂಬ ಊಹೆ ಕೂಡ ಮಾಡಲಾರಿರಿ. ಅಷ್ಟಕ್ಕೂ ಈ ಊಹೆ ಮಾಡಿ ಯಾರಿಗೆ ಏನಾಗಬೇಕಾಗಿದೆ?
ಕಲೀಲ, ಬೆಣ್ಣೆ ಹೊಳೆ, ವಜ್ರಗಿರಿ, ಬಿಳೀ ಮಡುವು, ಫಾತಿಮಾಳ ಗಾಣ..... ಎಲ್ಲಾನೂ ಕಾಲನ ಪರದೆಯ ಹಿಂದೆ ಮಾಯವಾಗಿವೆ. ಮುಂದೆ ಏನಾಗುತ್ತೋ ಕಾದು ನೋಡೋಣ.

ಹೆಳವನ ಮೇಲೆ ಕುರುಡ ಕೂತಿದ್ದಾನೆ ದಾರಿ ಸಾಗುವುದೆಂತೋ ನೋಡಬೇಕು.......

Tuesday, February 10, 2009

ಲಾಟೀನು


ಲಾಟೀನಿನ ಕತ್ತಲು, ಕಪ್ಪು ಕರಿಯೋ ಎಂಬಂತೆ ಆವರಿಸಿತ್ತು. ಒಳ ಮೈಯನ್ನೆಲ್ಲಾ ಎಣ್ಣೆಯ ಕರಿ ದಪ್ಪಗೆ ಮೆತ್ತಿಕೊಂದಿದ್ದರೆ, ಅದರೊಡೆಯ ತಿಪ್ಪಾಭಟ್ಟನ ಹೊರಮೈ ಹೋಮದ ಹೊಗೆ, ಅರ್ಧ ಹಸಿ ಕಟ್ಟಿಗೆಗಳಿಗೆ ಪ್ರತೀಕವಿದ್ದಂತೆ ತನ್ನ ನಿಜ ವರ್ನವನ್ನೆಲ್ಲ ಮುಚ್ಚಿಟ್ಟು ಗ್ರಹಣ ಬಡಿದಂತೆ ತೋರುತ್ತಿತ್ತು. ತಿಪ್ಪಾಭಟ್ಟನಿಗೇನಾಗಿದೆ? ಜಗತ್ತೆಲ್ಲಾ ಕತ್ತಲಾಗಿ ಕಾಣಲು ಕಾರಣವಾದರೂ ಏನು? ಅಮಾವಾಸ್ಯೆಯ ಘೋರತೆಯೆ? ಅಥವಾ ಇದು ಏಳು ದಿನ ರಾತ್ರಿಗಳನ್ನು ಹೋಮಕುಂಡದ ಎದುರು ಕೂತು ಕಳೆದ ಫಲಿತಾಂಶವೇ? ಸುಡು ಪ್ರಭೆಯಿಂದ ಕಣ್ಣಿನ ಪಾಪೆಗಳು ಎಂದೆಂದೂ ಹಿಗ್ಗಿವೆಯೋ? ಕಟ್ಟಿಗೆಗಳ ಹೊಗೆ ಕಣ್ಣು ಗುದ್ದೆಗಳನ್ನೆಲ್ಲಾ ಕಪ್ಪು ಮಾಡಿಸಿದೆಯೋ?

ಒಂದು
ಕೈಯಲ್ಲಿ ಲಾಟೀನು ಇನ್ನೊಂದರಲ್ಲಿ ಹೇರಂಬ ಶಾಸ್ತ್ರಿಗಳು ಹಾಕಿದ ದಿಗ್ಬಂಧನ ಹಿಡಿದು ಹೆಜಿಮೆಯ ದಿಕ್ಕು ಅಂತ ತಿಳಿದ ದಿಕ್ಕಿನ ಕಡೆಗೆ ಕಾಲು ಹಾಕುತ್ತಾ ಹೊರಟ ತಿಪ್ಪಾಭಟ್ಟ ಒಂದೇ ಗುರಿ ಅಂದರೆ ಹೆಜಿಮೆಯ ಮಾರಿ ಹೊಳೆಯ ಮೇಲ್ದಂಡೆಯ ಮೇಲೆ ಇರುವ ಕಟ್ಟುಭೂತಪ್ಪನಿಗೆ ದಿಗ್ಬಂಧನವನ್ನು ಒಪ್ಪಿಸಿ ಪೀಡೆ ಕಳೆದುಕೊಳ್ಳುವುದೇ ಆಗಿತ್ತು. ಆದರೆ ಇದು ಅಷ್ಟು ಸುಲಭದ ಮಾಲ್ಲ, ಪಂಚಭೂತಗಳಿಗೂ ಗೊತ್ತಾಗದಂತೆ ರಾತ್ರಿ ಮಾಡುವ ಕೆಲಸ ಇದಾಗಬೇಕೆಂದು ಶಾಸ್ತ್ರಿಗಳ ಕಟ್ಟಪ್ಪಣೆ ಆಗಿದೆ. ದೊಡ್ದ್ಯಾ ರಣಪಿಶಾಚಿ ಅಂದ್ರೆ ಅದರ ಪ್ರಾಮುಖ್ಯತೆ ಇನ್ನೂ ಹೆಚ್ಚು, ಅದು ಸೀಮೆಯಲ್ಲೇ ಯಾರಿಗೂ ಪಳಗಿಸಲಾಗದ ಮಹಾ ಪಿಶಾಚಿ. ಶಾಸ್ತ್ರಿಗಳ ಕಡು ಸಾಹಸ, ಏಳು ದಿನಗಳ ಹೋಮ ಈಗ ಫಲ ಕೊಟ್ಟಿದೆ, ಅದರ ಅಂತ್ಯ ಕ್ರಿಯೆಯೇ ಈಗಿನ ಕರ್ಮ.

ಜತೆಯಲ್ಲಿ ಹೊರಟ ಮಾರ್ಯಾನ ಜೊತೆಗೋ ಏನೂ ಮಾತಾಡೋ ಹಾಗಿಲ್ಲ, ಕಟ್ಟಪ್ಪಣೆ ಶಾಸ್ತ್ರಿಗಳಿಂದ. ಸುಮ್ಮನೆ ಹೆಜಿಮೆಯ ಕಡೆ ಕತ್ತಲೆ ಸವಾರಿ ಮಾಡತೊಡಗಿದ. ಮೂರು ಮಾರು ಹಿಂದೆ ಒಡೆಯನ ಹೆಜ್ಜೆ ಗುರುತಿನ ಮೇಲೆ ಹೆಜ್ಜೆ ಹಾಕುತ್ತಾ ತನ್ನೊಳಗೆ ತಾನೆ ಯೋಚಿಸುತ್ತಿದ್ದ ಮಾರ್ಯಾ. ನಿನ್ನೆ ಇಳಿಸಿದ ಕಳ್ಳು ಪದರು ಬಂದಿರಬಹುದೇ? ಕೂರ್ ದಿಬ್ಬದ ಮೇಲಿನ ನಂದೀ ಮರದ ಜೇನು ಮತ್ತೆ ಕಟ್ಟಿರಬಹುದೇ? ಹೀಗೇ ಅವರಿಬ್ಬರೂ ಬೇಲಿ ದಾಟಿ ಹೊಲಿಗೇರೀ ಹತ್ತಿರ ಬಂದರು, ಮಾರ್ಯಾನ ಹೆಂಡತಿ ರಾಮಿ ಕೂಸನ್ನು ಕಂಕುಳಲ್ಲಿ ಎತ್ತಿಕೊಂಡು ಕಾಯುತ್ತಿದ್ದಳು, ಮಾರ್ಯಾ ಅತೀ ಸಹಜ ಎಂಬಂತೆ ಒಡೆಯನನನ್ನು ಬಿಟ್ಟು ಹಟ್ಟಿ ಕಡೆ ನಿರ್ಗಮಿಸಿದ.

ಸ್ವಲ್ಪ
ಹೊತ್ತಿನ ನಂತರ ತನ್ನ ಜೊತೆ ಯಾರು ಇಲ್ಲದ್ದು ಕಂಡು ತಿಪ್ಪಾಟ್ಟ ಹೆದರತೊಡಗಿದ, ಘೋರ ಕತ್ತಲು, ನಿರಂತರವಾಗಿ ಕೊನೆಯೇ ಇಲ್ಲದಂತೆ ಎದುರುಗೊಳ್ಳುತ್ತಿರುವ ಕಪ್ಪು ಭಯಭೀತವಾಗಿತ್ತು. ತಿಪ್ಪಾಟ್ಟ ಇಂಥ ಘೋರತೆಯನ್ನು ಯಾವತ್ತೂ ಕಂಡವನಲ್ಲ. ಆವತ್ತು ರಾತ್ರಿ ಶಾಸ್ತ್ರಿಗಳು ಅಂಜನ ಹಾಕಿ ಕಂಡು ಹಿಡಿದ ಚಿಕ್ಕಜ್ಜ ದೊಡ್ದ್ಯಾ ಇತಿಹಾಸ ಕಣ್ಣು ಮುಂದೆ ಕವಿಯಿತು. ತಿಪ್ಪಾಟ್ಟ ಚಿಕ್ಕಜ್ಜ ದೊಡ್ದ್ಯಾ ಹುಟ್ಟಿದಾಗಿಂದಲೇ ದೊಡ್ದ್ಯಾನೇ ಆಗಿದ್ದನಂತೆ. ಗುಣ ಮತ್ತು ಆಕಾರಗಳಲ್ಲಿ ಯಾವತ್ತೂ ಮನೆಯ ಯಾರನ್ನೂ ಹೊಲದ ದೊಡ್ದ್ಯಾನನ್ನು ಸ್ವಂತ ತಾಯಿಯಿಂದಲೇ ಸಾಕಲು ಅಸಾಧ್ಯವಾಗತೊದಗಿತ್ತು, ಹೀಗೆ ಬಾಲ್ಯದಲ್ಲೇ ಮನೆಯಿಂದ ಹೊರಬಿದ್ದ ದೊಡ್ದ್ಯಾಗೆ ಆಶ್ರಮದಲ್ಲಿ ಪ್ರೀತಿ ವಾತ್ಸಲ್ಯಗಳಾವುವೂ ಸಿಗಲಿಲ್ಲ, ರಾಕ್ಷಸನಾಗಿ ಬೆಳೆದ ದೊಡ್ದ್ಯಾ. ಒಂದು ದಿನ ಆಶ್ರಮದಿಂದ ಮಾಯನಾದ, ಆಮೇಲೆ ಅದ್ಯಾವುದೋ ಮರಾಠಿ ಯೋಧರೊಡನೆ ಸೇರಿ ಗೆರಿಲ್ಲಾ ಯುದ್ಧ ಮಾಡತೊಡಗಿದ. ಜಾತಿಗೆ ಕೇಡು ಬಗೆದು ಜೀವ ಹತ್ಯೆಗೆ ಕಾರಣನಾದ ದೊಡ್ದ್ಯಾ ಮುಂದೆ ಮೊಗಲ್ಲ ಕೈಗೆ ಸಿಕ್ಕಿ ಹಿಂಸೆಗೆ ಗುರಿಯಾದ. ನರಳಿ ನರಳಿ ಸತ್ತ ದೊಡ್ದ್ಯಾ ಆತ್ಮಕ್ಕೆ ಶಾಂತಿ ಸಿಗದೇ ರಣಪಿಶಾಚಿಯಾಗಿ ಮನೆ ಮಂದಿಯನ್ನೆಲ್ಲ ಕಾಡತೊಡಗಿತ್ತು.

ಲಾಟೀನು ಹಿಡಿದ ಬಲ ಅಂಗೈ ಬೆವರತೊಡಗಿತು. ತಿಪ್ಪಾಟ್ಟನಿಗೆ ಹಳೆಯ ನೆನಪಾಯ್ತು. ಬಹು ಹಿಂದಿನ ನೆನಪು, ಮದುವೆಯಾದ ಹೊಸತು, ಮಾವನ ಮನೆಯಿಂದ ಹೊರಟಿದ್ದು ತಡವಾಗಿ ದಾರಿಯಲ್ಲಿ ಕತ್ತಲಾಗಿತ್ತು. ಇದೇ ಮುಂದಿನ ಮಾವಿನಕೊಪ್ಪಿಲಿನ ಹತ್ತಿರ ಬರುವಷ್ಟರಲ್ಲಿ ಗಾಢವಾದ ಮೋಡ ಕವಿದು ಬಲು ಬೇಗ ಕತ್ತಲಾಗಿತ್ತು. ಆವತ್ತೂ ಹೀಗೆಯೇ ಹೆದರಿದ್ದ ತಿಪ್ಪಾಭಟ್ಟ. ಥಟ್ಟನೆ ಬಡಿದ ಸಿಡಿಲಿನ ಸದ್ದು ಹೆಂಡತಿ ಸರಸ್ವತಿಯನ್ನು ಗಾಬರಿಗೊಳಿಸಿತ್ತು, ಬಲ ಅಂಗೈಯನ್ನು ತಬ್ಬಿ ಹಿಡಿದಳು, ಆಗ ತಿಪ್ಪಾಟ್ಟನಿಗೆ ಆಗಿದ್ದು ಬೇರೆಯೇ ಚಿಂತೆ, ತಾನು ಹೆದರಿದ್ದು ಹೆಂಡತಿಗೆ ತಿಳಿದುಬಿಟ್ಟರೆ... ? ತನ್ನ ಮರ್ಯಾದೆ ಕಡಿಮೆ ಆದರೆ ... ?

ಹಳೆ ನೆನಪು ತಿಪ್ಪಾಟ್ಟನನ್ನು ರಸಿಕನನ್ನಾಗಿಸಿತು, ಹೆಂಡತಿಯ ಸೌಮ್ಯ ಅಪ್ಪುಗೆ ನೆನಪಾಯ್ತು. ಎಂದೂ ಹೆಂಡತಿಯನ್ನು ಬಿಟ್ಟಿರದ ತಿಪ್ಪಾಭಟ್ಟನಿಗೆ ಏಳು ದಿನಗಳ ದೀರ್ಘತೆ ಅರಿವಾಯ್ತು. ಕಾಲುಗಳು ತನ್ನಷ್ಟಕ್ಕೆ ತಾನೇ ನಡೆಯುತ್ತಿದ್ದವು. ಹೆಜಿಮೆಯನ್ನು ಸೇರುವುದು ದೂರದ ಮಾತು, ತಾನು ಎಲ್ಲಿರುವೆನೆಂದೂ ಗೊತ್ತಾಗುತ್ತಿರಲಿಲ್ಲ ತಿಪ್ಪಾಟ್ಟನಿಗೆ. ದೂರದಲ್ಲಿ ಮೂಲೆ ಹೊಳೆಯ ಆಚೆ ದಂಡೆಯಲ್ಲಿ ಸಣ್ಣದೊಂದು ಬೆಳಕು ಕಂಡಿತು. ಅಡಿಕೆ ಸಾರವನ್ನು ದಾಟಿ ಆಚೆ ಹೋಗಬೇಕಿತ್ತು. ಎಡಗೈಯಲ್ಲಿರುವ ದಿಗ್ಬಂಧನವನ್ನು ಹೊಳೆಗೆ ತೂರಿ ನಿಧಾನವಾಗಿ ಒಂದೇ ಕೈಯಲ್ಲಿ ಸಾರವನ್ನು ಹಿಡಿದು ಹರಸಾಹಸ ಮಾಡಿ ಆಚೆ ದಾಟಿ ಬೆಳಕು ಬಂದ ಹಟ್ಟಿಯಂತೆ ಕಂಡ ಗುಡಿಸಿಲಿನ ಜಗುಲಿ ಅಂತ ತಿಳಿದು ಅಡ್ಡ ಬಿದ್ದ.


ಯಾವಾಗ ಬೆಳಕು ಹರಿಯಿತೋ ತಿಳಿಯಲೇ ಇಲ್ಲ. ನೆಲವೆಲ್ಲಾ ಹಸಿಯಾಗಿತ್ತು, ಗುಂಡಿಗಳೆಲ್ಲಾ ನೀರು ತುಂಬಿಕೊಂಡಿದ್ದವು, ಜೋರಾಗಿ ಬಂದ ಮಳೆ ಎಲ್ಲಾ ಘೋರತೆಯನ್ನು ತೊಳೆದಂತೆ ಅನಿಸಿತು. ಬೇಸಗೆ ಮಳೆ ಜೋರಾಗಿಯೇ ಬಂದಿದೆ ಅಂದುಕೊಳ್ಳುತ್ತ ಮನೆ ಕಡೆ ಹೊರಟ. ಬಲು ಬೇಗನೆ ಮನೆ ಹತ್ತಿರವಾಗುತ್ತಿತ್ತು, ಬೆಳಗಿನ ಚುಮುರು ಬಿಸಿಲು ತಿಪ್ಪಾಟ್ಟನನ್ನು ಸೆರೆಯಿಂದ ಮುಕ್ಥಿಗೊಳಿಸಿತ್ತು. ಜಗುಲಿಯ ಮೇಲಿಂದ ರಂಗೋಲಿ ಚುಕ್ಕಿಯ ಉದ್ದ ಲಂಗ ಹಾಕಿ, ಕೆಂಪು ರಿಬ್ಬನ್ನಿನ ಎರಡು ಜಡೆ ಪದ್ಮ ಓದುತ್ತಾ ಬಂದು ಅಪ್ಪನನ್ನು ತಬ್ಬಿದಳು.

ಅಪ್ಪ
ಸ್ನಾನಕ್ಕೆ ಹೋದ ನಂತರವೂ ಪದ್ಮಳ ಮುಖ ಪ್ರಶ್ನೆಗಳಿಂದ ಮುಕ್ತವಾಗಿರಲಿಲ್ಲ. ತಕ್ಷಣ ಏನೋ ಹೊಳೆದಂತೆ ಅನ್ನಿಸಿ ಜಗುಲಿಯ ಮೇಲೆ ಅಪ್ಪ ಇಟ್ಟು ಹೋದ ಲಾಟೀನನ್ನು ತೆಗೆದು ಹರಳಿನ ಒಳಗೆ ಕೈ ಹಾಕಿ ಒರೆಸುತ್ತಾ, ಶುಭ್ರಗೊಂಡ ಸ್ಫಟಿಕದ ಗಾಜನ್ನು ನೋಡುತ್ತಾ .......


"ಅಪ್ಪಯ್ಯಗೆ ಏನೂ ಗೊತ್ತಾಗಲ್ಲ, ಲಾಟೀನು ಬೆಳ್ಳಗಿದ್ರೆ ಬಿಳೀ ಬೆಳಕು ಕೊಡತ್ತೆ, ಕಪ್ಪಗಿದ್ರೆ ಕಪ್ಪು ಬೆಳಕು ಕೊಡತ್ತೆ, ಅದಕ್ಕೇ ಅಪ್ಪನ ಮುಖಾನೂ ಮಸಿ ಬಡಿದಂತೆ ಆಗೋಗಿದೆ, ಅಲ್ವಾ ಅಮ್ಮಾ?"
ಅಂದಳು.